2024ನೇ ಸಾಲಿನ ಭಾರತರತ್ನಕ್ಕೆ ಪಿ.ವಿ. ನರಸಿಂಹ ರಾವ್ ಆಯ್ಕೆ.


ಪಾಮುಲಪರ್ತಿ ವೆಂಕಟ ನರಸಿಂಹರಾವ್ ಅಥವಾ ಪಿ.ವಿ. ನರಸಿಂಹ ರಾವ್ ಭಾರತದ 9ನೇ ಪ್ರಧಾನ ಮಂತ್ರಿಗಳಾಗಿ 1991ರಿಂದ 1996ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಇವರಿಗೆ 2024ರ ಭಾರತರತ್ನ ನೀಡಿ ಸರ್ಕಾರ ಅವರ ಜನಾನುರಾಗಿ ಸೇವೆಗೆ ಗೌರವ ಸಲ್ಲಿಸಿದೆ. ಇವರು ಭಾರತದ ದಕ್ಷಿಣ ಭಾಗದಿಂದ ಚುನಾಯಿಸಲ್ಪಟ್ಟ ಮೊದಲ ಪ್ರಧಾನಿ ಆಗಿದ್ದರು.
ಬ್ರಿಟಿಷ್ ಭಾರತದ ಹೈದರಾಬಾದ್ ರಾಜ್ಯದ ಲಕ್ನೆಪಳ್ಳಿಯಲ್ಲಿ 1921, ಜೂನ್ 28ರಂದು ಜನಿಸಿದ ರಾವ್ ಅವರದ್ದು ಒಂದು ಕೃಷಿ ಕುಟುಂಬ. ವೃತ್ತಿಯಲ್ಲಿ ವಕೀಲರಾದ ಇವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಭಾಗವಹಿಸಿದ್ದರು. 1957ರಲ್ಲಿ ಮೊದಲಬಾರಿಗೆ ಶಾಸಕರಾಗಿ, ಅಖಂಡ ಆಂಧ್ರಪ್ರದೇಶ ವಿಧಾನಸಭೆಗೆ ಹೆಜ್ಜೆ ಇಟ್ಟರು. ತದನಂತರ 1977ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಸಂಸತ್ತಿಗೆ ಪ್ರವೇಶ ಪಡೆದರು. 1971ರಲ್ಲಿ ಇವರು ಅಖಂಡ ಆಂಧ್ರಪ್ರದೇಶದ 4ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾವ್ ಅವರು ದೇಶದ 18ನೇ ಗೃಹ ಸಚಿವರಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದಾರೆ. 1991ರಲ್ಲಿ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿ, ದೇಶದ 9ನೇ ಪ್ರಧಾನಿಯಾದರು.
ಇವರ ಆಡಳಿತದ ಕಾಲದಲ್ಲಿ ದೇಶದ ಆರ್ಥಿಕತೆ ಸಂಕಷ್ಟಕ್ಕೆ ತಲುಪಿತ್ತು. ವಿದೇಶಿ ವಿನಿಮಯ ಕೆಳಮಟ್ಟಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರಾಗಿ ಬಂದಂತಹ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಜಾಗತೀಕರಣ, ಉದಾರೀಕರಣ, ಮತ್ತು ಖಾಸಗೀಕರಣದ ಅಡಿಪಾಯದಲ್ಲಿ ನೂತನ ಭಾರತದ ಆರ್ಥಿಕತೆಯನ್ನು ಸೃಷ್ಟಿಸಲಾಯಿತು.
ನರಸಿಂಹ ರಾವ್ ಅವರು 9ನೇ ಡಿಸೆಂಬರ್, 2004ರಂದು, ತಮ್ಮ 83ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಸ್ಮಾರಕವನ್ನು ‘ಜ್ಞಾನ ಭೂಮಿ’ ಎಂದು ಕರೆಯಲಾಗಿದೆ.