BengaluruKarnatakaPolitics

ಮುಡಾ ಹಗರಣಕ್ಕೆ ಅಂಟಿಕೊಳ್ತು ಇನ್ನೊಂದು ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದರೆ ತಮ್ಮ ಪ್ರಭಾವ..?!

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದ ಕುರಿತು ಮತ್ತೆ ಹೊಸ ಆರೋಪಗಳು ಹೊರಬಿದ್ದಿವೆ. ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುಡಾ ಸೈಟ್‌ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಪ್ಲಾಟ್ ಹಂಚಿಕೆಯಲ್ಲಿ ಕಾನೂನು ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ ನೀಡಿದ ಮಾಹಿತಿಯ ಪ್ರಕಾರ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ನೀಡಲಾದ ಪ್ಲಾಟ್‌ನಲ್ಲಿ, ದಸ್ತಾವೇಜು ನೋಂದಣಿಗೆ ಅಗತ್ಯವಿದ್ದ ಸ್ಟ್ಯಾಂಪ್ ಡ್ಯೂಟಿಯನ್ನು ಮುಡಾ ತಹಸೀಲ್ದಾರನವರೇ ಭರಿಸಿ ಸಹಾಯ ಮಾಡಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆಯಾಗಿರುವ ಸೈಟ್‌ನಲ್ಲಿ ತಹಸೀಲ್ದಾರ ಸ್ವತಃ ಸ್ಟ್ಯಾಂಪ್ ಡ್ಯೂಟಿ ಹಣ ನೀಡಿದ್ದು, ಇದಕ್ಕಿಂತಲೂ ಹೆಚ್ಚು ಪುರಾವೆ ಬೇಕಾ?” ಎಂದು ಸಿಡಿಮಿಡಿಗೊಂಡ ಕೃಷ್ಣ, ಈ ಕುರಿತು ಸಿದ್ದರಾಮಯ್ಯ ಜನರಿಗೆ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ.

ಹಾಗೆಯೇ, ಕಾಂಗ್ರೆಸ್ ಪಕ್ಷದ ವಕ್ತಾರ ಎಂ. ಲಕ್ಷ್ಮಣ ಅವರು, ಕೃಷ್ಣ ಅವರು ಪ್ರಕರಣದ ತನಿಖೆಗೆ ಅಡ್ಡಿಯಾಗುತ್ತಿರುವುದಾಗಿ ಆರೋಪಿಸಿದ್ದಾರೆ. “ಈ ಹಗರಣದ ತನಿಖೆ ನಡೆಯುತ್ತಿರುವಾಗಲೇ ಕೃಷ್ಣ ಅವರು ಸಾಕ್ಷ್ಯಗಳ ಬಿಡುಗಡೆ ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದು, ಕೃಷ್ಣ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಕೂಡ ಲೋಕಾಯುಕ್ತ ಪೊಲೀಸ್‌ ತನಿಖೆಯ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ. “ಮುಖ್ಯಮಂತ್ರಿಯ ಬಗ್ಗೆ ಎಸ್‌ಪಿ ಹಂತದ ಅಧಿಕಾರಿಯು ತನಿಖೆ ನಡೆಸುವುದೇ? ಇದು ನಾಟಕ. ಅವರು ಬರೆದಿದ್ದೇನು ಅಂತಾ ನಮಗೆ ಗೊತ್ತಿಲ್ಲ” ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯನವರು ಲೋಕಾಯುಕ್ತ ತನಿಖೆಗೆ ಹಾಜರಾಗಿದ್ದಾಗ, “ಲೋಕಾಯುಕ್ತವು ಸ್ವತಂತ್ರ ಸಂಸ್ಥೆ, ಗವರ್ನರ್‌ ಸೂಚನೆಯ ಮೇರೆಗೆ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ನಡೆಸುತ್ತಿದೆ” ಎಂದು ಹೇಳಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button