
ಬ್ರಾಂಪ್ಟನ್: ಬ್ರಾಂಪ್ಟನ್ ನಗರದ ಹಿಂದೂ ದೇವಾಲಯದ ಹೊರಗಡೆ ಇಂದು ನಡೆದ ಹಿಂಸಾತ್ಮಕ ಘಟನೆಯಿಂದ ಸ್ಥಳೀಯ ಸಮುದಾಯಗಳು ಬೆಚ್ಚಿ ಬಿದ್ದಿವೆ. ಈ ಘಟನೆಗೆ ಹಿಂದೂ ಮತ್ತು ಸಿಖ್ ಸಮುದಾಯದ ಕೆಲ ಸಂಘಟನೆಗಳ ನಡುವಿನ ಉದ್ವಿಗ್ನತೆಯೇ ಕಾರಣವೆಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಹರಸಾಹಸ ಪಟ್ಟರು. ಈ ಘರ್ಷಣೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಹಿಂಸಾತ್ಮಕವಾಗಿ ನಡೆದಿರುವ ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ಅಪಾರ ಆತಂಕಕ್ಕೆ ಕಾರಣವಾಗಿದೆ.
ದಾಳಿಗೆ ಕಾರಣವೇನು?
ಹಿಂದೂ ದೇವಾಲಯದಲ್ಲಿ ಭಾರತೀಯ ವೀಸಾ ಮತ್ತು ಪಾಸ್ಪೋರ್ಟ್ ಸೇವೆಗಳನ್ನು ಒದಗಿಸಲು ಆರಂಭಿಸಿದ ವಿದೇಶಾಂಗ ಶಿಬಿರವು ಈ ಗಲಾಟೆಗೆ ನಾಂದಿಯಾಗಿದೆಯೆಂದು ಮೂಲಗಳು ಮಾಹಿತಿ ನೀಡುತ್ತಿವೆ. ಇಂತಹ ಶಿಬಿರಗಳಿಗೆ ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದವು. ತೀವ್ರವಾದ ಮಾತಿನ ಚಕಮಕಿ ಬಳಿಕ ಪರಿಸ್ಥಿತಿ ಹಿಂಸಾತ್ಮಕ ಘರ್ಷಣೆಗೆ ತಿರುಗಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣವನ್ನು ಮೂಡಿಸಿದೆ.
ಪೊಲೀಸರ ಎಚ್ಚರಿಕೆ!
ಈ ಘಟನೆಯ ಕುರಿತು, ಆಳವಾದ ತನಿಖೆಗೆ ಪೊಲೀಸರು ನಿರ್ಧರಿಸಿದ್ದು, ಸ್ಥಳೀಯರು ಶಾಂತಿ ಕಾಪಾಡಲು ಮನವಿ ಮಾಡಲಾಗಿದೆ. ಸ್ಥಳೀಯ ಭಾರತೀಯ ಸಮುದಾಯ, ವಿಶೇಷವಾಗಿ ಕನ್ನಡಿಗರು, ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.