
ಬೆಂಗಳೂರು: ಅಕ್ರಮ ಅದಿರು ಕಳ್ಳಸಾಗಾಣಿಕೆ ಆರೋಪದಲ್ಲಿದ್ದ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ತಾವು ಎದುರಿಸುತ್ತಿದ್ದ 7 ವರ್ಷ ಜೈಲು ಶಿಕ್ಷೆಯಿಂದ ತಾತ್ಕಾಲಿಕ ನಿಟ್ಟಿನಲ್ಲಿ ಮುಕ್ತರಾಗಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಸೈಲ್ ಸೇರಿದಂತೆ ಎಲ್ಲಾ ಏಳು ಆರೋಪಿಗಳಿಗೆ ಜಾಮೀನು ನೀಡಿ ಮಹತ್ವದ ತೀರ್ಪು ನೀಡಿದೆ.
7 ವರ್ಷ ಶಿಕ್ಷೆಗೆ ಹೈಕೋರ್ಟ್ ಬ್ರೇಕ್:
ಅಕ್ಟೋಬರ್ 26 ರಂದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಲು ಸೈಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್, ಸೆಷನ್ ಕೋರ್ಟ್ ಆದೇಶವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ್ದು, ಶೇಕಡಾ 25 ರಷ್ಟು ದಂಡ ಪಾವತಿಸಲು ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ:
ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಅದಿರು ಸಾಗಣೆ ಮಾಡಲು ಸತೀಶ್ ಸೈಲ್ ಅವರು ಬ್ಲಾಕ್ ಗಳನ್ನು ಕಾರವಾರದ ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿದ್ದರು ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಸುಮಾರು 11,312 ಮೆಟ್ರಿಕ್ ಟನ್ ಅದಿರನ್ನು ಬಂದರದಲ್ಲಿ ಜಪ್ತಿ ಮಾಡಲಾಗಿತ್ತು.
ಸತೀಶ್ ಸೈಲ್ ಅವರ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಈ ಕೃತ್ಯ ನಡೆಸಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಲೋಕಾಯುಕ್ತರು ತನಿಖೆ ನಡೆಸಿ, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು: ಭವಿಷ್ಯದಲ್ಲಿ ಏನಾಗಲಿದೆ?
ತಾತ್ಕಾಲಿಕವಾಗಿ ಹೈಕೋರ್ಟ್ ಜಾಮೀನು ನೀಡಿದರೂ, ಶೇಕಡಾ 25% ದಂಡ ಕಟ್ಟಲು ಷರತ್ತನ್ನು ವಿಧಿಸಿದ್ದರೂ, ಈ ಪ್ರಕರಣವು ಇನ್ನಷ್ಟು ಚರ್ಚೆಗೆ ಒಳಗಾಗಿದೆ. ಬೇಲೆಕೇರಿ ಅದಿರು ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಕೋರ್ಟ್ ತೀರ್ಪು, ಮತ್ತು ಶಾಸಕರ ಭವಿಷ್ಯ ಇನ್ನೂ ಪೂರ್ತಿಯಾಗಿ ನಿರ್ಧಾರವಾಗಿಲ್ಲ. ಈ ವಿಷಯದ ಸುತ್ತ ಮುಂದಿನ ಬೆಳವಣಿಗೆಗೆ ರಾಜ್ಯದ ರಾಜಕೀಯ ವಲಯ ಕಾದಿದೆ.