ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ತಂಡ: ಯಾಕಿರಬಹುದು..?!

ಬೆಂಗಳೂರು: ಇತ್ತೀಚಿಗೆ ಆಯ್ಕೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಪದಾಧಿಕಾರಿಗಳು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಶ್ರೀ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಚಿತ್ರರಂಗದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಸಾ.ರಾ.ಗೋವಿಂದು ನೇತೃತ್ವ
ಕನ್ನಡ ಪರ ಹೋರಾಟಗಾರರು ಮತ್ತು ಮಾಜಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಈ ಭೇಟಿ ನಡೆಯಿತು. ಪದಾಧಿಕಾರಿಗಳಾದ ಅಧ್ಯಕ್ಷ ಎಂ. ನರಸಿಂಹಲು, ಉಪಾಧ್ಯಕ್ಷರಾದ ಕೆ.ವಿ. ವೆಂಕಟೇಶ್, ಶಿಲ್ಪ ಶ್ರೀನಿವಾಸ್, ಕೆ.ಓ. ರಂಗಪ್ಪ, ಗೌರವ ಕಾರ್ಯದರ್ಶಿಗಳಾದ ಡಿ.ಕೆ. ರಾಮಕೃಷ್ಣ, ಎಂ.ಎನ್. ಕುಮಾರ್, ಎಲ್.ಸಿ. ಕುಶಾಲ್ ಹಾಗೂ ಖಜಾಂಚಿ ಬಿ. ಮಹದೇವ್ ಮುಖ್ಯಮಂತ್ರಿಗಳಿಗೆ ತಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು.
ಚಿತ್ರರಂಗದ ಸಮಸ್ಯೆಗಳಿಗೆ ದಾರಿ?
ಈ ಭೇಟಿ ಸಂದರ್ಭದಲ್ಲಿ ಚಿತ್ರರಂಗದ ಪ್ರಮುಖ ಸಮಸ್ಯೆಗಳಾದ ಜಿಎಸ್ಟಿ ತೊಡಕು, ಬೃಹತ್ ಹಾಲ್ಗಳ ಲಭ್ಯತೆ, ಚಿತ್ರಮಂದಿರಗಳ ನವೀಕರಣ, ಕನ್ನಡ ಚಿತ್ರಗಳಿಗೆ ಉತ್ತೇಜನ ಹೀಗೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಚಿತ್ರರಂಗದ ಮುಂದಿನ ಅಭಿವೃದ್ಧಿಗಾಗಿ ಸರ್ಕಾರ ತಕ್ಕ ಸಹಕಾರವನ್ನು ಕಲ್ಪಿಸಬೇಕೆಂದು ಪದಾಧಿಕಾರಿಗಳು ಮನವಿ ಮಾಡಿದರು.
ವಿಶೇಷ ಸಭೆಗೆ ಸಮಯಾವಕಾಶ:
ಪದಾಧಿಕಾರಿಗಳು ಮುಖ್ಯಮಂತ್ರಿಗಳಿಂದ ಚಿತ್ರರಂಗದ ಹೆಚ್ಚಿನ ಸಮಸ್ಯೆಗಳ ಚರ್ಚಿಸಲು ವಿಶೇಷ ಸಭೆಯ ಸಮಯವನ್ನು ನೀಡುವಂತೆ ವಿನಂತಿಸಿದರು. ಈ ನಿರ್ಧಾರವು ಚಿತ್ರರಂಗದ ಮುಂದಿನ ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಿದ್ಧರಾಮಯ್ಯನವರ ಪ್ರತಿಕ್ರಿಯೆ:
ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಈ ವಿಚಾರಗಳಿಗೆ ತಾತ್ವಿಕವಾಗಿ ಗಮನ ಹರಿಸಿದರು, ಚಿತ್ರರಂಗದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದ ಸಾಧ್ಯವಾದ ಸಂಪೂರ್ಣ ಸಹಾಯವನ್ನು ನೀಡುವ ಭರವಸೆ ನೀಡಿದರು.