ವಿಶೇಷ ಅಂಕಣ - ಅಂತರಂಗದ ಚಳವಳಿ

ಐ ಪಿ ಎಲ್ ಹಬ್ಬವೋ – ತಿಥಿಯೋ – ಶಾಪವೋ……

ವಿವೇಕಾನಂದ. ಎಚ್.ಕೆ.

ಐ ಪಿ ಎಲ್ ಹಬ್ಬವೋ – ತಿಥಿಯೋ – ಶಾಪವೋ……

ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಇನ್ನು ಪ್ರಾರಂಭ……

ಕ್ರಿಕೆಟ್ ಆಟಗಾರರು – ಫ್ರಾಂಚೈಸಿಗಳು – ಕ್ಲಬ್ ಬಾರ್ ಗಳು – ಜಾಹೀರಾತುದಾರರು – ಅದರ ಪ್ರಚಾರ ರಾಯಭಾರಿಗಳು – ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು – ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ…..

ಈ ಆಟ ಒಂದು ದೊಡ್ಡ ಆರ್ಥಿಕ ಚಟುವಟಿಕೆಗಳನ್ನು ಹೊಂದಿದೆ ಎಂಬುದು ನಿಜ. ಆದರೆ ಅಷ್ಟೇ ಸಮಾಜ ಘಾತಕವೂ ಆಗಿದೆ.

ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ‌ಸಮಾಧಾನಕರ ಉತ್ತರ ಹೇಳಬಹುದು. ಆದರೆ ಈ ಕೊಳ್ಳುಬಾಕ ಸಂಸ್ಕೃತಿ – ಕಾರ್ಪೊರೇಟ್ ವ್ಯವಸ್ಥೆ, ಜನರ ದುರಾಸೆಯ ಪ್ರವೃತ್ತಿ, ಸುಲಭವಾಗಿ ಹಣ ಮಾಡಬೇಕು ಎಂಬ ಮನೋಭಾವ ಎಲ್ಲವೂ ಇರುವಾಗ ಅವರಿಗೆ ಇದೇ ಲಾಭದ ಮಾರ್ಗಗಳು. ಇದನ್ನು ಕೇವಲ ಹಣದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಧಃಪತನದ ಹಾದಿಯಾಗಿ ಗುರುತಿಸಬೇಕು.

ವಿವಿಧ ರೀತಿಯ ಆಕರ್ಷಕ ಲಾಭದ ಬೆಟ್ಟಿಂಗ್ ಆ್ಯಪ್ ಗಳು ಮೊಬೈಲ್ ಮಾರುಕಟ್ಟೆಯಲ್ಲಿ ದಾಳಿ ಇಟ್ಟಿವೆ. ಸಾಕಷ್ಟು ಮಧ್ಯಮ ವರ್ಗದ ಜನರೇ ಇದರಲ್ಲಿ ಹಣ ಹೂಡುತ್ತಾರೆ. ಈ ಜೂಜಿನಲ್ಲಿ ಲಾಭ ಮಾಡಿ ಯಶಸ್ವಿಯಾದವರು‌ ತುಂಬಾ ತುಂಬಾ ಕಡಿಮೆ. ನಷ್ಟ ಅನುಭವಿಸಿ ಎಲ್ಲವನ್ನೂ ಕಳೆದುಕೊಂಡವರು ಕೊನೆಗೆ ಪ್ರಾಣವನ್ನೂ ಕಳೆದುಕೊಂಡವರೇ ಹೆಚ್ಚು.

ಪ್ರಾರಂಭದಲ್ಲಿ ಸರಳವಾಗಿ ಖುಷಿ ಖುಷಿಯಾಗಿ ಇದು ನಮ್ಮನ್ನು ಸೆಳೆಯತೊಡಗುತ್ತದೆ. ಹಾಗೆಯೇ ಮುಂದುವರೆದಂತೆ ಆಳಕ್ಕೆ ಎಳೆದೊಯ್ಯುತ್ತದೆ. ಕೊನೆಗೆ ನಮ್ಮ ಅಸ್ತಿತ್ವವನ್ನೇ ಮರೆಸುತ್ತದೆ. ನಮ್ಮ ಭಾವನೆಗಳನ್ನು ಬೆಟ್ಟಿಂಗ್ ನಿಯಂತ್ರಿಸುತ್ತದೆ. ಮಾನ, ಮರ್ಯಾದೆ, ಕುಟುಂಬದ ಜವಾಬ್ದಾರಿ, ಭವಿಷ್ಯದ ಕಷ್ಟಗಳು ಯಾವುದೂ ಆ ಕ್ಷಣದಲ್ಲಿ ನೆನಪಾಗದಂತೆ ಮಾಡುತ್ತದೆ.

ನಮ್ಮಲ್ಲಿ ಸೋಮಾರಿತನ ಬೆಳೆಸುತ್ತದೆ. ಹಣಕ್ಕಾಗಿ ಯಾರನ್ನು ಬೇಕಾದರೂ ಅಂಗಲಾಚುವ, ಏನನ್ನೂ ಬೇಕಾದರೂ ಮಾಡುವ, ಯಾವುದನ್ನು ಬೇಕಾದರೂ ಮಾರುವ ಮನಸ್ಥಿತಿ ಸೃಷ್ಟಿ ಮಾಡುತ್ತದೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರು ಇದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಕೆಲವರು ದುಷ್ಚಟಗಳಿಗೆ ಬಲಿಯಾದರೆ, ಮತ್ತೆ ಕೆಲವರು ಎಲ್ಲವನ್ನೂ ಕಳೆದುಕೊಂಡು ತೀರಾ ಕೆಳಹಂತಕ್ಕೆ ಕುಸಿದರೆ, ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಊರು ಬಿಟ್ಟು ಓಡಿ ಹೋಗುವವರು, ಸಂಸಾರದಿಂದ ವಿಚ್ಚೇದಿತರಾಗುವವರು, ಮಾನಸಿಕ ಖಿನ್ನತೆಗೆ ಒಳಗಾಗುವವರು ಸಹ ಸಾಕಷ್ಟು ಜನರಿದ್ದಾರೆ.

ಇದು ಅಧೀಕೃತವಾದರು – ಅನಧೀಕೃತವಾದರು ಪರಿಣಾಮಗಳಲ್ಲಿ ಅಂತಹ ವ್ಯತ್ಯಾಸವೇನು ಆಗುವುದಿಲ್ಲ. ಕಾರಣ ಈ‌ ನೆಲದ ಸಂಸ್ಕೃತಿಗೆ ಈ‌ ಬೆಟ್ಟಿಂಗ್ ಒಗ್ಗುವುದಿಲ್ಲ. ಶ್ರಮ ಸಂಸ್ಕೃತಿ, ಕಾಯಕವೇ ಕೈಲಾಸ, ಉದ್ಯೋಗಂ ಪುರುಷ ಲಕ್ಷಣಂ, ಎಂಬ ಮಾತುಗಳ ಜೊತೆಗೆ ಅನೇಕ ಗಾದೆ ಮಾತುಗಳು ಈ ರೀತಿ ಸುಲಭವಾಗಿ ಬಂದ ಹಣ ಉಳಿಯುವುದಿಲ್ಲ ಅಥವಾ ಅದು ನಮ್ಮನ್ನು ದಾರಿ ತಪ್ಪಿಸುತ್ತದೆ ಎಂದೇ ಅನುಭವದಿಂದ ಸಾಬೀತಾಗಿದೆ.

ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ, ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ, ಜನರ ಹುಚ್ಚು ಮನಸ್ಸಿನ ಹೊಳೆಯಲ್ಲಿ ಬೆಟ್ಟಿಂಗ್ ನಿಲ್ಲಿಸುವುದು ಅಥವಾ ಇಲ್ಲದಂತೆ ಮಾಡುವುದು ಕಷ್ಟ. ಅದಕ್ಕೆ ಬದಲಾಗಿ ನಾವುಗಳೇ ಆ ಚಟಕ್ಕೆ ಬಲಿಯಾಗದಂತೆ ಸ್ವಯಂ ನಿಯಂತ್ರಣ ಹೊಂದಬೇಕು ಮತ್ತು ನಮ್ಮ ‌ಸುತ್ತಮುತ್ತಲಿನ ಪರಿಚಿತರು ಸ್ನೇಹಿತರು ಇದಕ್ಕೆ ಬಲಿಯಾಗದಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು.
ಸಂಘ ಸಂಸ್ಥೆಗಳನ್ನು ನಡೆಸುವವರು ತಮ್ಮ ಸದಸ್ಯರುಗಳಿಗೆ ಸಾಧ್ಯವಾದಷ್ಟು ಎಚ್ಚರಿಕೆ ನೀಡಬೇಕು…….

ಒಂದು ಅತ್ಯುತ್ತಮ ಆಟ ನಿಧಾನವಾಗಿ ಮನರಂಜನೆಯ ಹೆಸರಿನಲ್ಲಿ ದೊಡ್ಡ ಉದ್ಯಮವಾಗಿ ಬೆಳೆದು ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟು ಒಂದು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ದುರ್ಗತಿಗೆ ಕಾರಣವಾಗುತ್ತಿರುವುದು ನಮ್ಮ ಸಮಾಜದ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ.

ಆಡಳಿತಾತ್ಮಕ ವ್ಯವಸ್ಥೆ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ. ಐ ಪಿ ಎಲ್ ಅಥವಾ ಅದರಿಂದಾಗುವ ಬೆಟ್ಟಿಂಗ್ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿ ಎಂದು ಆಶಿಸುತ್ತಾ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Show More

Leave a Reply

Your email address will not be published. Required fields are marked *

Related Articles

Back to top button