
ಬೆಂಗಳೂರು: ಭಾರತಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ರಕ್ಷಾ ಬಂಧನ ಹಬ್ಬವು, ಸಹೋದರ ಸಹೋದರಿಯರ ಭ್ರಾತೃ-ಭಗಿನಿ ಬಂಧನದ ಪ್ರತೀಕವಾಗಿದೆ. ‘ರಕ್ಷಾ’ ಅಂದರೆ ರಕ್ಷಣೆ ಮತ್ತು ‘ಬಂಧನ’ ಅಂದರೆ ಬಂಧನ. ಈ ಹಬ್ಬದಂದು ಸಹೋದರಿ ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುತ್ತಾಳೆ, ಈ ರಾಕಿಯು ಇದು ಬಣ್ಣ ಬಣ್ಣದ ದಾರದಿಂದ ಕೂಡಿದ್ದು, ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ಸಹೋದರಿ ಇಂದು ಪ್ರಾರ್ಥಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಸಹೋದರನು ಅವಳನ್ನು ಎಲ್ಲಾ ರೀತಿಯ ಶತ್ರುಗಳಿಂದ ರಕ್ಷಿಸಲು ಕಟಿಬದ್ಧನಾಗುತ್ತಾನೆ.
ರಕ್ಷಾ ಬಂಧನದ ಹಿನ್ನಲೆಯಲ್ಲಿ ಸಾಕಷ್ಟು ಪೌರಾಣಿಕ ಕತೆಗಳು, ಉದಾಹರಣೆಗೆ ಭಗವಾನ್ ಕೃಷ್ಣ ಮತ್ತು ದ್ರೌಪದಿ, ಯಮ ಮತ್ತು ಯಮಿಯ ಕಥೆಗಳು ಪ್ರಸಿದ್ಧವಾಗಿವೆ. ಆದರೆ, ರಾಣಿ ಕರ್ಣಾವತಿ ಮತ್ತು ಮೊಘಲ್ ಚಕ್ರವರ್ತಿ ಹೂಮಾಯೂನ್ರ ನಡುವಣ ರಾಖಿಯ ಕಥೆ ವಿಶೇಷ ಗಮನಾರ್ಹವಾಗಿದೆ.
ಮಧ್ಯಯುಗದಲ್ಲಿ, ರಜಪೂತರು ಮುಸ್ಲಿಂ ದಾಳಿಗಳನ್ನು ಎದುರಿಸುತ್ತಿದ್ದರು. ಕರ್ಣಾವತಿ, ತನ್ನ ಪತಿ ರಾಣಾ ಸಂಗನ ಸಾವಿನ ನಂತರ ತನ್ನ ಮಗನ ಅಪ್ರಾಪ್ತಾವಸ್ಥೆಯಲ್ಲಿ ಮೇವಾರಿನ ರಾಜ್ಯದ ಆಡಳಿತ ನೋಡುತ್ತಿದ್ದಳು. ಈ ವೇಳೆ, ಗುಜರಾತಿನ ಬಹಾದೂರ್ ಶಾ ಮತ್ತೊಮ್ಮೆ ಮೇವಾರ ಮೇಲೆ ದಾಳಿ ನಡೆಸಿದಾಗ, ಕರ್ಣಾವತಿ, ತನ್ನ ಸಹಾಯಕ್ಕಾಗಿ ಚಕ್ರವರ್ತಿ ಹೂಮಾಯೂನ್ ಅವರಿಗೆ ರಾಖಿಯನ್ನು ಕಳುಹಿಸಿದಳು. ಹೂಮಾಯೂನ್, ಇನ್ನೊಂದು ಯುದ್ಧದ ಮಧ್ಯದಲ್ಲಿದ್ದರೂ, ಈ ಪ್ರೀತಿಪೂರ್ವಕ ನಡವಳಿಕೆಯನ್ನು ಗಮನಿಸಿ ಮೇವಾರಿಗೆ ತೆರಳಲು ಸಿದ್ಧನಾದನು. ಆದರೆ, ಹೂಮಾಯೂನ್ ತಕ್ಷಣವೇ ಮೇವಾರಿಗೆ ತಲುಪಲು ಆಗಲಿಲ್ಲ, ಮತ್ತು ಇತ್ತ ಚಿತ್ತೂರಿನಲ್ಲಿ ರಜಪೂತ ಸೇನೆ ಸೋತಿತು. ಈ ಸಮಯದಲ್ಲಿ, ಕರ್ಣಾವತಿ ತನ್ನ ಅತ್ಮಸಮ್ಮಾನಕ್ಕಾಗಿ ಜೌಹರ್ (ಜ್ವಾಲೆಯಲ್ಲಿ ತನ್ನನ್ನು ತಾನೇ ಆಹುತಿ ನೀಡಿ) ಮಾಡಿದಳು. ಆದಾಗ್ಯೂ, ಹೂಮಾಯೂನ್ ಅವರ ಸೈನ್ಯವು ತಲುಪಿದ ನಂತರ ಬಹಾದೂರ್ ಶಾ ಚಿತ್ತೂರನ್ನು ತೊರೆದು ಹೋಗಬೇಕಾಯಿತು ಮತ್ತು ಮೇವಾರವನ್ನು ಕರ್ಣಾವತಿಯ ಮಗ ವಿಕ್ರಮಜಿತ್ಗೆ ಹಸ್ತಾಂತರಿಸಲಾಯಿತು.
ಈ ಕಥೆ ನಮ್ಮ ದೇಶದಲ್ಲಿ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಮೊಘಲರು ಬೇರೆ ದೇಶದಿಂದ ಬಂದಂತಹ ವ್ಯಕ್ತಿಗಳಾಗಿದ್ದರು ಕೂಡ ಈ ದೇಶದ ಸಂಸ್ಕೃತಿ ಅವರನ್ನು ಭಾರತೀಯರನ್ನಾಗಿಸಿತು. ಮೊಘಲ್ ದೊರೆ ಹುಮಾಯೂನ್ ಮೇವಾರವನ್ನು ತಲುಪಲು ಸಮಯ ತೆಗೆದುಕೊಂಡರು ಸಹ, ಒಂದು ಅಸಹಾಯಕ ಹಿಂದೂ ರಾಣಿಯ ಪರವಾಗಿ ನಿಲ್ಲುವ, ಅದೇ ರೀತಿ ನ್ಯಾಯಯುತವಾಗಿ ಮೇವಾರದ ಸಿಂಹಾಸನವನ್ನು ಅವಳ ಮಗನಿಗೆ ಕೊಟ್ಟು ರಕ್ಷಿಸುವ ಮನಸ್ಸನ್ನು ನೀಡಿದ್ದು ಭಾರತದ ವಾತಾವರಣ ಎಂದರೆ ತಪ್ಪಲ್ಲ.