ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳಾದಾಗ, ದೇಶವ್ಯಾಪಿ ಆಕ್ರೋಶ ಪ್ರತಿಭಟನೆ ನಡೆಯುವುದು ಸಹಜ. ಈ ಹಿನ್ನೆಲೆಯಲ್ಲಿ ಹಿಂದೆ ನಡೆದ ನಿರ್ಭಯ ಪ್ರಕರಣ, ಕಲ್ಕತ್ತಾದ ಡಾಕ್ಟರ್ ಪ್ರಕರಣವನ್ನು ನಾವು ನೋಡಿದ್ದೇವೆ. ಆದರೆ ಪುರುಷನ ಮೇಲೆ ಹಲ್ಲೆ, ಹತ್ಯೆ, ದೌರ್ಜನ್ಯ ಅಥವಾ ಒಬ್ಬ ವ್ಯಕ್ತಿಯನ್ನ ಮಾನಸಿಕವಾಗಿ ಹಿಂಸೆ ಮಾಡಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶವ ಸೃಷ್ಟಿ ಮಾಡಿದರೂ ಕೂಡ ಯಾರೂ ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.
ಇತ್ತೀಚಿಗೆ ಒಬ್ಬ ಪುರುಷನ ಸಾವು ದೇಶಾದ್ಯಂತ ಭಾರಿ ಸಂಚಲನವನ್ನು ಮೂಡಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ರಾಷ್ಟ್ರವ್ಯಾಪಿ ಕೋಲಾಹಲಕ್ಕೆ ಕಾರಣವಾಗುತ್ತಿದೆ, ಇಂಟರ್ ನ್ಯಾಶನಲ್ ಸುದ್ದಿ ಆಗಿದೆ. ಸೋಷಿಯಲ್ ಮೀಡಿಯಾದಿಂದ ಹಿಡಿದು ಕೋರ್ಟ್ವರೆಗೂ ಚರ್ಚೆ ಆಗುತ್ತಿದೆ. ʼ#JusticeForAtulʼ ಅಂತ ಬಹುಷಃ ಮೊದಲ ಬಾರಿಗೆ ಪುರುಷನ ಪರವಾಗಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಭಾರತದ ಸರ್ವೋಚ್ಛ ನ್ಯಾಯಾಲಯ ಧ್ವನಿ ಎತ್ತಿದೆ. ಈ ಹಿನ್ನೆಲೆಯಲ್ಲಿ ವಿಚ್ಛೇದನ ನಂತರದ ಜೀವನಾಂಶದ ಕುರಿತು 8 ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ.
1. ಆರ್ಥಿಕ ಸ್ಥಿತಿ ಪರಿಶೀಲನೆ: ಪತಿ ಮತ್ತು ಪತ್ನಿಯ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಇಬ್ಬರ ಆಸ್ತಿಪಾಸ್ತಿ ಮತ್ತು ಆದಾಯದ ವಿವರಗಳನ್ನು ಸಂಗ್ರಹಿಸಬೇಕು.
2. ಅಪೇಕ್ಷಿತ ಜೀವನಮಟ್ಟ: ಪತಿ ಅಥವಾ ಪತ್ನಿ ಒಟ್ಟಾಗಿ ವಾಸಿಸುತ್ತಿದ್ದಾಗ ಹೊಂದಿದ್ದ ಜೀವನಮಟ್ಟವನ್ನು ಆಧರಿಸಿ ಜೀವನಾಂಶ ನೀಡಬೇಕಾಗುತ್ತದೆ.
3. ಆಧಾರ್ ಅಥವಾ ಪಾನ್ ತಪಾಸಣೆ: ಹಣಕಾಸು ನೈತಿಕತೆಯನ್ನು ದೃಢಪಡಿಸಲು ಪತಿ ಅಥವಾ ಪತ್ನಿಯ ಮೂಲ ಗುರುತು ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
4. ಜೀವನಾಂಶ ಮಿತಿಯ ಅವಧಿ: ಜೀವನಾಂಶ ನೀಡುವ ಅವಧಿಯನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ. ದೀರ್ಘಾವಧಿಯ ಜೀವನಾಂಶ ಅಥವಾ ತಾತ್ಕಾಲಿಕ ಜೀವನಾಂಶ ನೀಡುವ ಬಗ್ಗೆ ನ್ಯಾಯಾಲಯ ತೀರ್ಮಾನಿಸುತ್ತದೆ.
5. ಮಕ್ಕಳ ಕಲ್ಯಾಣ: ಮಕ್ಕಳ ಅಗತ್ಯಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ಅವರು ಜೀವನಾಂಶದ ಆದಾಯದಲ್ಲಿ ಪ್ರಾಥಮಿಕ ಹಕ್ಕುದಾರರಾಗುತ್ತಾರೆ.
6. ಇತರ ಆದಾಯ ನಿರ್ಣಯ: ಜೀವನಾಂಶ ಅರ್ಜಿ ಸಲ್ಲಿಸಿದ ವ್ಯಕ್ತಿಯ ಇತರ ಆದಾಯ ಇದ್ದರೆ, ಅದನ್ನು ಅನುಸರಿಸಲು ಲೆಕ್ಕಹಾಕಲಾಗುತ್ತದೆ.
7. ನಿರಾಕರಣೆ ಹಕ್ಕು: ಕಿರುಕುಳದ ದೋಷ ತೋರಿಸಿಕೊಂಡಲ್ಲಿ, ಜೀವನಾಂಶ ಅರ್ಹತೆಯನ್ನು ತಿರಸ್ಕರಿಸಬಹುದು.
8. ಪುನರ್ವಿವಾಹ ಮತ್ತು ಮಿತಿಗೊಳಿಸುವುಕೆ: ಪುನರ್ವಿವಾಹ ನಡೆದರೆ ಅಥವಾ ಆರ್ಥಿಕವಾಗಿ ಸ್ವಾವಲಂಬಿ ಆದಾಗ, ಜೀವನಾಂಶವನ್ನು ನಿಲ್ಲಿಸುವ ಹಕ್ಕು ನ್ಯಾಯಾಲಯಕ್ಕಿದೆ.
ಏನಿದು ಅತುಲ್ ಸುಭಾಷ್ ಕೇಸ್?, ಈ ಪ್ರಕರಣ ಯಾಕಿಷ್ಟು ಚರ್ಚೆ ಆಗುತ್ತಿದೆ. ಅತುಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ ಎನ್ನುವುದು ಕುತೂಹಲ ಮೂಡಿಸಿದೆ. ಅತುಲ್ ಸುಭಾಷ್ ಎನ್ನುವ 34 ವರ್ಷದ ವ್ಯಕ್ತಿ ಬಿಹಾರ ಮೂಲದವರು. ಅತುಲ್ ಬೆಂಗಳೂರಿನ ಮಾರತಹಳ್ಳಿಯ ಮುನ್ನೆ ಕೊಳಾಲ ಎನ್ನುವ ಜಾಗದಲ್ಲಿ ವಾಸಿಸುತ್ತಿದ್ದರು. ಇವರು ಆಟೋಮೊಬೈಲ್ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಉತ್ತಮ ಸ್ಥಾನದಲಿದ್ದರು.
2019ರಲ್ಲಿ ʼಶಾದಿ.ಕಾಮ್ʼ ಮೂಲಕ ನಿಖಿತಾ ಸಿಂಘಾನಿಯ ಎನ್ನುವ ಮಹಿಳೆಯ ಪರಿಚಯ ಆಗಿತ್ತು. ನಿಖಿತಾ ಮೂಲತಃ ಉತ್ತರ ಪ್ರದೇಶದವರು, ಅಸೆಂಚರ್ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು 2019 ರಲ್ಲಿ ಮದುವೆಯಾದರು, 4 ವರ್ಷದ ಮಗ ಕೂಡ ಇದ್ದಾನೆ. ಆದರೆ ಕೌಟುಂಬಿಕ ಕಲಹದಿಂದ 2021ರ ಮೇ ನಲ್ಲಿ ನಿಖಿತಾ ಪತಿಯನ್ನು ಬಿಟ್ಟು ತವರು ಮನೆಗೆ ವಾಪಾಸ್ ಹೋಗಿದ್ದರು. ತವರು ಮನೆ ಸೇರಿದ ನಂತರ ನಿಖಿತಾ ಕುಟುಂಬ ಜೀವನಾಂಶ ಕೊಡಬೇಕು ಎಂದು ಕೋರ್ಟ್ನಲ್ಲಿ ಕೇಸ್ ಹಾಕಿ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದರು ಎಂದು ಅತುಲ್ ತಮ್ಮ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಅತುಲ್ ಈಗ ಚಿತ್ರಹಿಂಸೆಯನ್ನು ತಾಳಲಾಗದೆ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ “JUSTICE IS DUE” ಎಂಬ ಕಾರ್ಡನ್ನು ಕೂಡ ತಮ್ಮ ದೇಹದ ಮೇಲೆ ಹಾಕಿಕೊಂಡಿದ್ದರು. 24 ಪುಟಗಳ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

2019 ರಲ್ಲಿ ಮದುವೆ ಆದ ಅತುಲ್ ಮತ್ತು ನಿಖಿತಾ ಮಧ್ಯೆ ಕೇವಲ 8 ತಿಂಗಳ ಅವಧಿಯಲ್ಲೇ ಮನಸ್ಥಾಪ ಶುರುವಾಗಿತ್ತು. ನಿಖಿತಾ ಅವರ ತಾಯಿ ಬಿಜಿನೆಸ್ ಮಾಡಲು ಅತುಲ್ ಬಳಿ 15 ಲಕ್ಷವನ್ನು ಪಡೆದುಕೊಂಡಿದ್ದರು, ಆದರೆ ಆ ಹಣವನ್ನು ಬಿಜಿನೆಸ್ಗೆ ಬಳಸಿಕೊಳ್ಳದೆ ಮನೆ ಖರೀದಿಸಲು ಯೋಜನೆ ಹಾಕಿಕೊಂಡಿದ್ದರು. ಈ ವಿಚಾರ ತಿಳಿದ ನಂತರ ಹಣ ವಾಪಸ್ ಕೇಳಿದಾಗ ಕೊಡಲು ನಿರಾಕರಿಸುತ್ತಾರೆ. ಅದಲ್ಲದೆ ನಿಖಿತಾ ಸಹೋದರ ಪಿಯುಶ್ ಸಿಂಘಾನಿಯಾ ಕೋಡ ಬಿಜಿನೆಸ್ ಮಾಡಲು ಹಣವನ್ನು ಕೇಳಿರುತ್ತಾನೆ. ಹೀಗೆ ಹಣಕಾಸಿನ ವಿಚಾರದಲ್ಲಿ ಜಗಳ ಶುರುವಾಗಿರುತ್ತದೆ.
ನಿಖಿತಾ ಮನೆಯವರು ಅತುಲ್ ಮೇಲೆ ಸಾಲು-ಸಾಲು ಕೇಸ್ಗಳನ್ನು ಹಾಕುತ್ತಾರೆ. ತಿಂಗಳಿಗೆ 2 ಲಕ್ಷ ರೂಗಳ ಜೀವನಾಂಶಕ್ಕೆ ಬೇಡಿಕೆ ಇಡುತ್ತಾರೆ, 3 ಕೋಟಿ ರೂಗಳ ಪರಿಹಾರವನ್ನು ಕೇಳುತ್ತಾರೆ ಮತ್ತು 4 ವರ್ಷದ ಮಗನನ್ನು ನೋಡಿಕೊಳ್ಳಲು ತಿಂಗಳಿಗೆ 40 ಲಕ್ಷ ರೂಗಳನ್ನೂ ಸಹ ಕೇಳಿರುತ್ತಾರೆ. ಇಷ್ಟೆಲ್ಲಾ ಆದಮೇಲೆ ತಿಂಗಳಿಗೆ 80 ಸಾವಿರ ರೂಗಳನ್ನು ಜೀವನಾಂಶ ಕೊಡಬೇಕೆಂದು ಕೋರ್ಟ್ ತೀರ್ಪು ಕೊಟ್ಟಿತ್ತು. ಅತುಲ್ ಭಾರತದ ನ್ಯಾಯಾಂಗ ವ್ಯವಸ್ಥೆ ಮುಂದೆ 25 ಪ್ರಶ್ನೆಗಳನ್ನು ಇಟ್ಟಿದ್ದಾರೆ ಮತ್ತು ತನ್ನ ಕೊನೆಯ 12 ಆಸೆಗಳನ್ನು ಬರೆದಿಟ್ಟಿದ್ದಾರೆ. ನನ್ನ ಪ್ರಕರಣದ ವಿಚಾರಣೆ ಲೈವ್ ಸ್ಟ್ರೀಮ್ ಆಗಬೇಕು. ನನ್ನ ಸಾವಿಗೆ ನ್ಯಾಯ ಸಿಕ್ಕರೆ ಮಾತ್ರ ನನ್ನ ಅಸ್ತಿಯನ್ನು ಗಂಗೆಯಲ್ಲಿ ವಿಸರ್ಜಿಸಿ, ನ್ಯಾಯ ಸಿಗದಿದ್ದರೆ ಕೋರ್ಟ್ ಮುಂದಿನ ಚರಂಡಿಯಲ್ಲಿ ಹಾಕಿ ಎಂದು ತಮ್ಮ 24 ಪುಟಗಳ ಡೆತ್ನೋಟ್ನಲ್ಲಿ ಬರೆದು ಡಿ.9 ರಂದು ಟೆಕ್ಕಿ ಅತುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ