ಒಂದು ತಿಂಗಳ ಕಾಲ ‘ಡಿಜಿಟಲ್ ಅರೆಸ್ಟ್’: ಬೆಂಗಳೂರಿನ ಟೆಕ್ಕಿಯಿಂದ 11 ಕೋಟಿ ರೂ. ಪೀಕಿದ ವಂಚಕರು…!

ಬೆಂಗಳೂರು ಸೇರಿದಂತೆ ದೇಶಾದ್ಯಂತ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಣವಂತರು ಹಾಗೂ ವಿದ್ಯಾವಂತರೇ ದುಷ್ಕರ್ಮಿಗಳ ವಂಚನೆಯ ಜಾಲಕ್ಕೆ ಸಲೀಸಾಗಿ ಬೀಳುತ್ತಿದ್ದಾರೆ. ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವ್ಯಕ್ತಿಯೊಬ್ಬರು ನವೆಂಬರ್ 11 ರಿಂದ ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ಗೆ ಒಳಗಾಗಿ, ಬರೋಬ್ಬರಿ 11 ಕೋಟಿ ರೂ. ಕಳೆದುಕೊಂಡಿದ್ದಾರೆ.
ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿರುವವರಲ್ಲಿ ಅಕ್ಷರಸ್ಥರೇ ಹೆಚ್ಚು. ನಗರದ 39 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರನ್ನು ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದ ಸೈಬರ್ ವಂಚಕರು ಬರೋಬ್ಬರಿ 11.83 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಯಲ್ಲಿ ಅತ್ಯಧಿಕ ಮೊತ್ತ ಕಳೆದುಕೊಂಡ ದೇಶದ ಮೊದಲ ಪ್ರಕರಣ ಇದಾಗಿದೆ. ಈ ಕುರಿತು ಸಂತ್ರಸ್ತ ಟೆಕ್ಕಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿಜಯ್ಕುಮಾರ್ ಅವರಿಗೆ ನ.11 ರಂದು ಬೆಳಗ್ಗೆ 10.30 ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೂರು ಪ್ರತ್ಯೇಕ ನಂಬರ್ಗಳಿಂದ ಕರೆ ಮಾಡಿ, ತನ್ನನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಆಧಾರ್ಕಾರ್ಡ್ಗೆ ನೀಡಿರುವ ಮೊಬೈಲ್ ನಂಬರ್ನಿಂದ ಕಾನೂನು ಬಾಹಿರ ಜಾಹೀರಾತು ಹಾಗೂ ಸಂದೇಶಗಳು ರವಾನೆಯಾಗಿದ್ದು, ಆ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುತ್ತಿದೆ. ಜೊತೆಗೆ ಮುಂಬೈನ ಕೊಲಾಬಾ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಿ ಎಂದು ಹೆದರಿಸಿದ್ದಾನೆ.

ಆನಂತರ ಮತ್ತೊಬ್ಬ ಅಪರಿಚಿತ ಕರೆ ಮಾಡಿ ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದು, ಅದರಂತೆ ವಿಜಯ್ಕುಮಾರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸ್ ಉಡುಪಿನಲ್ಲಿದ್ದ ವ್ಯಕ್ತಿ ವಿಡಿಯೋ ಕರೆ ಮಾಡಿ, ತಾನು ಮುಂಬೈ ಪೊಲೀಸ್ ಎಂದು ಹೇಳಿದ್ದಾನೆ. ‘ಉದ್ಯಮಿ ನರೇಶ್ ಗೋಯಲ್ ಎಂಬುವವರು ನಿಮ್ಮ ಆಧಾರ್ ಕಾರ್ಡ್ ಬಳಸಿ ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದು 6 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿರುವುದಾಗಿ ಬೆದರಿಸಿದ್ದಾನೆ. ಜೊತೆಗೆ ಈ ಪ್ರಕರಣದ ತನಿಖೆ ಕುರಿತಂತೆ ಯಾರಿಗೂ ಮಾಹಿತಿ ನೀಡಬಾರದೆಂದು ಸೂಚಿಸಿದ್ದಾನೆ.
ನ.25 ರಂದು ಪುನಃ ಸ್ಕೈಪ್ ಕರೆ ಮೂಲಕ ಮಾತನಾಡಿದ ನಕಲಿ ಪೊಲೀಸ್ ಅಧಿಕಾರಿಯು, ನಿಮ್ಮ ವಿರುದ್ಧದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಪೂರ್ಣವಾಗಬೇಕಿದ್ದು, ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ಕುಟುಂಬ ಸದಸ್ಯರನ್ನು ಬಂಧಿಸುತ್ತೇವೆ ಎಂದು ಹೆದರಿಸಿದ್ದಾನೆ. ತನಿಖೆ ಸಲುವಾಗಿ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಬೇಕಿದ್ದು, ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ.
ಬಂಧನ ಭೀತಿಯಿಂದ ಹೆದರಿದ ವಿಜಯ್ಕುಮಾರ್ ಮೊದಲ ಬಾರಿಗೆ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ 75 ಲಕ್ಷ ರೂ. ಬಳಿಕ ಮತ್ತೊಂದು ಖಾತೆಗೆ 3.41 ಕೋಟಿ ರೂ. ವರ್ಗಾಯಿಸಿದ್ದಾರೆ. ಇದೇ ರೀತಿ ಡಿ.12 ರವರೆಗೂ ಪ್ರತಿನಿತ್ಯ ವಿಜಯ್ಕುಮಾರ್ಗೆ ಕರೆ ಮಾಡಿ ಬಂಧಿಸುವ ಬೆದರಿಕೆಯೊಡ್ಡಿ ಒಟ್ಟು 11,83,55,648 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿಯಾದ ಬಳಿಕವೂ ವಂಚಕರ ಕಿರುಕುಳ ಮುಂದುವರಿದಿದೆ. ಬಳಿಕ ಇದು ಸೈಬರ್ ವಂಚಕರ ಕೃತ್ಯವೆಂಬುದು ಅರಿವಾಗಿದ್ದು, ಅದೇ ದಿನ ಠಾಣೆಗೆ ಭೇಟಿ ನೀಡಿ ದೂರು ನೀಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಂಚಕರು ಏಳು ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ ದೂರುದಾರರಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣದ ವಹಿವಾಟು ನಡೆದ ಖಾತೆಗಳ ವಿವರ ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದರು.

11 ತಿಂಗಳಲ್ಲಿ 491 ಡಿಜಿಟಲ್ ಅರೆಸ್ಟ್:
ಡಿಜಿಟಲ್ ಅರೆಸ್ಟ್ ಸ್ವರೂಪಕ್ಕೆ ಸಂಬಂಧಿಸಿದಂತೆ ಅಧಿಕ ಪ್ರಕರಣ ದಾಖಲಾಗಿರುವ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಈ ವರ್ಷದ ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ 641 ಡಿಜಿಟಲ್ ಅರೆಸ್ಟ್ ಸಂಬಂಧಿತ ಸೈಬರ್ ಅಪರಾಧವೆಸಗಿರುವ ವಂಚಕರು 109 ಕೋಟಿ ರೂ. ದೋಚಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿಯೇ 480 ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರು 42.4 ಕೊಟಿ ರೂ. ಕಳೆದುಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳಿಂದ ಕೇವಲ 9 ಕೋಟಿ ರೂ. ಮಾತ್ರ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೆದರದೆ ದೂರು ನೀಡಿ:
”ಟ್ರಾಯ್ ಅಧಿಕಾರಿಗಳು, ಮುಂಬೈ ಪೊಲೀಸರು ಹಾಗೂ ನಾನಾ ರಾಜ್ಯಗಳ ಪೊಲೀಸರ ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡಿ ನಾಗರಿಕರನ್ನು ಹೆದರಿಸುತ್ತಿದ್ದಾರೆ. ವಿದೇಶಕ್ಕೆ ಡ್ರಗ್ಸ್ ಪಾರ್ಸೆಲ್, ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ, ಭಯೋತ್ಪಾದನಾ ಚಟುವಟಿಕೆಗಳಿಗೆ ಸಿಮ್ ಕಾರ್ಡ್ ಬಳಕೆಯಾಗಿದೆ ಎಂದು ಯಾವುದೇ ಪೊಲೀಸ್ ಅಧಿಕಾರಿ ಕರೆ ಮಾಡಿದರೂ, ನಾಗರಿಕರು ಹೆದರಬಾರದು. ಅಂತಹ ಕರೆಗಳನ್ನು ನಿರ್ಲಕ್ಷ್ಯಿಸಬೇಕು. ವಂಚನೆ ಸಂಬಂಧ ಯಾವುದೇ ಕರೆಗಳು ಬಂದರೂ ತಕ್ಷಣ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು,” ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ಸಲಹೆ ನೀಡಿದ್ದಾರೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ